ಶಿವಮೊಗ್ಗ ಜಿಲ್ಲಾಧಿಕಾರಿ ಮಟ್ಟದಲ್ಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ತೀರ್ಥಹಳ್ಳಿ ಬಾಣಂತಿ ಸುಮ ಅವರ ಸಾವು ಪ್ರಕರಣವನ್ನು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ತಿಳಿಸಿದರು.
ಅವರು ಶನಿವಾರ ಮಾಧ್ಯಮಗಾರೊಂದಿಗೆ ಮಾತನಾಡಿ, ಹೆರಿಗೆ ರೋಗವಲ್ಲ. ಅದು ತಾಯ್ತನ. ವೈದ್ಯರು ಯಾರನ್ನು ಸಾಯಲು ಬಿಡಬಾರದು. ಜೀವ ಅಮೂಲ್ಯವಾದದು. ಈ ಉದ್ದೇಶದಿಂದ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಐಎಂಆರ್ ಸೇರಿ ಮಗು ಮತ್ತು ತಾಯಿ ಆರೋಗ್ಯವಾಗಿರಬೇಕೆಂದು ಹಲವಾರು ಕಾರ್ಯಕ್ರಮಗಳು ಹಾಗೂ ಯೋಜನೆಯನ್ನು ಜಾರಿ ಮಾಡಿದೆ. ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಬಂದಂತಹ ರೋಗಿಗಳನ್ನು ಮಂಗಳೂರಿನ ಮಣಿಪಾಲ್ಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಯಾಕೆ ರೋಗಿಗಳು ಅಲ್ಲಿಗೆ ಹೋಗುತ್ತಿದ್ದಾರೆ?. ಈ ಬಗ್ಗೆ ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೆಗ್ಗಾನ್ ನಲ್ಲಿ ಮೆಡಿಕಲ್ ಕಾಲೇಜು ಕೂಡ ಇದ್ದು, ಇಲ್ಲಿ ತುರ್ತಾಗಿ ಬಂದ ರೋಗಿಗಳಿಗೆ ಯಾಕೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲವೆಂದು ತನಿಖೆಗೆ ಒಳಪಡಿಸಬೇಕಿದೆ. ಇದರಿಂದಲೇ ರೋಗಿಗಳು ಸರ್ಕಾರಿ ಆಸ್ಪತ್ರೆಗಳನ್ನು ದೂಷಿಸುವುದು ಸಾಮಾನ್ಯವಾಗಿದೆ. ಸರ್ಕಾರಿ ವೈದ್ಯರು ಪ್ರಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಇದರಿಂದ ಹೊರ ಬರಲು ಸಾಧ್ಯ ಎಂದರು.
ಬಾಣಂತಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಇಲಾಖೆಯ ಕರ್ತವ್ಯ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಮೂಲಕ ಎಲ್ಲಾ ವರದಿಯನ್ನು ತರಿಸಿಕೊಂಡು ಅದನ್ನು ಪರಿಶೀಲಿಸಿ ಸಮಿತಿ ಮೂಲಕ ತನಿಖೆಗೆ ಒಳಪಡಿಸುತ್ತೇನೆ ಎಂದರು.
ಜಾಹೀರಾತು












