
ಆನಂದಪುರ,:
“ಅಧಿಕಾರದ ದುರಹಂಕಾರ ಮತ್ತು ದುರುಪಯೋಗ ಮಾಡುತ್ತಿರುವ ಶಾಸಕರು ಮತ್ತು ಪಂಚಾಯತ್ ಆಡಳಿತಾಧಿಕಾರಿಗಳಿಗೆ ನನ್ನ ವಿರೋಧವಿದೆ” ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದರು.
ಇವರು ಇಂದು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತ್ತೀಚಿಗೆ ಆನಂದಪುರದಲ್ಲಿ ಮಾರಿಕಾಂಬ ಜಾತ್ರೆಯ ಅಂಗವಾಗಿ ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಅನುಭವಿ ಮಾಜಿ ಅಧ್ಯಕ್ಷರು, ಸದಸ್ಯರನ್ನು ಕರೆಯದೆ ನಡೆಸಿರುವ ಸಭೆ ಖಂಡನೀಯವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ವಾರ್ಡಿನ ಸಮಸ್ಯೆಗಳನ್ನು ಅಲ್ಲಿ ಆಯ್ಕೆಯಾದ ಸದಸ್ಯರುಗಳಿಗಷ್ಟೆ ಚೆನ್ನಾಗಿ ಗೊತ್ತಿರುತ್ತದೆ. ಅವರನ್ನು ನಿರ್ಲಕ್ಷ್ಯಿಸಿ ಸಭೆ ನಡೆಸುವುದು ಅನ್ಯಾಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹಾಗೂ ಆಡಳಿತಾಧಿಕಾರಿಗಳು ಈ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ” ಎಂದು ಅವರು ಚುರುಕಾಗಿ ಹೇಳಿದರು.
ಸಾಗರದ ಜಾತ್ರೆಯಲ್ಲಿಯೂ ಇದೇ ರೀತಿಯ ರಾಜಕೀಯ ನಡೆ ನಡೆಸಲಾಗಿತ್ತು. ಆಗ ಬಿಜೆಪಿ ಮುಖಂಡ ಮೇಘರಾಜ್ ಪ್ರತಿಭಟಿಸಿದ ಬಳಿಕ ಮಾತ್ರ ಶಾಸಕರು ಮತ್ತು ಅವರ ಬೆಂಬಲಿಗರು ಶಾಂತರಾಗಿದ್ದರು. ಇದೀಗ ಆನಂದಪುರ ಜಾತ್ರೆಯಲ್ಲಿಯೂ ಅದೇ ಮಾದರಿಯ ರಾಜಕೀಯ ನಡೆಯುತ್ತಿದೆ ಇದಕ್ಕೆ ನಾನು ಬಿಡುವುದಿಲ್ಲ ಎಂದು ಕಟುವಾಗಿ ತಿಳಿಸಿದರು.

“ಜಾತ್ರಾ ವಿಷಯದಲ್ಲಿ ರಾಜಕಾರಣ ಬೇಡ” ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಹರತಾಳು ಹಾಲಪ್ಪ ಅವರು ಈ ಹಿಂದೆ ರಾಜಕಾರಣದಿಂದ ದೂರ ಉಳಿದು ಜಾತ್ರೆ ನಿರ್ವಹಿಸಿದ್ದರು ಎಂಬುದನ್ನು ಅವರು ಸ್ಮರಿಸಿದರು.
ಅಧಿಕಾರಿಗಳ ಎಚ್ಚರಿಕೆ:
“ಗ್ರಾ.ಪಂ. ಆಡಳಿತಾಧಿಕಾರಿ ಶಿವಪ್ರಕಾಶ್ ಶಾಸಕರ ಕೈ ಗೊಂಬೆಯಾಗಬಾರದು. ಅಧಿಕಾರಿಗಳು ಗೊಂದಲ ಸೃಷ್ಟಿಸಿದರೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೋಹನ್, “ಶಿವಪ್ರಕಾಶ್ ಕೃಷಿ ಇಲಾಖೆ ಮೂಲದವರು, ಅವರಿಗೆ ಈ ವಿಷಯಗಳ ಬಗ್ಗೆ ಜ್ಞಾನದ ಕೊರತೆಯಿದೆ. ಗ್ರಾಮ ಪಂಚಾಯತಿಯ ಅವಧಿಯಲ್ಲಿ ಹಲವಾರು ನಿರ್ಣಯಗಳು ಜಾತ್ರೆ ಕುರಿತು ಆಗಲೇ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಸಭೆ ನಡೆಸಿ ಮಾಜಿ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನಿರ್ಲಕ್ಷ ಮಾಡುವುದು ಸಮಂಜಸವಲ್ಲ” ಎಂದು ಕಿಡಿಕಾರಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ಗುರುರಾಜ್, ನವಿನಾ ರವೀಂದ್ರ ಗೌಡ, ಮಾಜಿ ಸದಸ್ಯರು ಚೌಡಪ್ಪ, ಮೋಹನ್ ಕುಮಾರ್, ಶಂಕರ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








