

✒️…ಅಮಿತ್ ಆರ್ ಆನಂದಪುರ
ಆನಂದಪುರ:ನಡೆಯುತ್ತಿರುವ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಲಹೆಗಳನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಜಾತ್ರೆ ಸುಗಮವಾಗಿ ನಡೆಯಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.
ಶನಿವಾರ ರಾತ್ರಿ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಜಾತ್ರಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಾತ್ರೆ ಎನ್ನುವುದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಗ್ರಾಮೀಣ ಒಗ್ಗಟ್ಟಿನ ಪ್ರತೀಕವಾಗಿದೆ. ಇಂತಹ ಜಾತ್ರೆಗಳು ಗ್ರಾಮಸ್ಥರ ನಡುವಿನ ಐಕ್ಯತೆ ಮತ್ತು ಭಕ್ತಿಭಾವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.

ಜಾತ್ರೆಯ ಯಶಸ್ಸಿಗೆ ಜಾತ್ರಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ತೋರಿಸುತ್ತಿರುವ ಸಹಕಾರ ಶ್ಲಾಘನೀಯವಾಗಿದೆ. ದೇವಿಯ ಕೃಪೆಯಿಂದ ಗ್ರಾಮಸ್ಥರು, ಭಕ್ತಾದಿಗಳು ಸೇರಿದಂತೆ ಎಲ್ಲರಿಗೂ ಆರೋಗ್ಯ, ಐಶ್ವರ್ಯ ಮತ್ತು ಸುಖ-ಶಾಂತಿ ದೊರಕಲಿ. ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ಆಚಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ರಾಜು ಮಾತನಾಡಿ, ಜಾತಿ, ಧರ್ಮ, ಪಕ್ಷಭೇದಗಳನ್ನು ಮರೆತು ನಾವೆಲ್ಲರೂ ಒಗ್ಗಟ್ಟಿನಿಂದ ಊರನ್ನು ಬೆಳೆಸೋಣ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಜಾತ್ರೆಯನ್ನು ಇನ್ನಷ್ಟು ವೈಭವದಿಂದ ನಡೆಸೋಣ ಎಂದು ಕರೆ ನೀಡಿದರು.
ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಮ್ಮೆಲ್ಲರ ಕನಸಿನ ತಾಯಿಯ ತವರು ಮನೆಯ ಕೆಲಸ ಭಾಗಶಃ ಮುಗಿದಿದ್ದು ಇನ್ನೂ ಸ್ವಲ್ಪ ಕೆಲಸ ಉಳಿದಿದೆ. ಮುಂದಿನ ಜನವರಿ ತಿಂಗಳಲ್ಲಿ ಇದರ ಲೋಕಾರ್ಪಣೆ ಮಾಡಲು ನಾವು ಸಜ್ಜಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಜಾತ್ರಾ ಸಮಿತಿ ಉಪಾಧ್ಯಕ್ಷ ಜಯದೇವಪ್ಪ ಗೌಡ್ರು, ನಾರಿ ಲೋಕಪ್ಪ, ಈರಪ್ಪ, ಬಸವರಾಜ್, ಕಾರ್ತಿಕ್, ರಾಘವೇಂದ್ರ, ಸುಬ್ಬಣ್ಣ, ಜಯಪ್ಪ, ಈಶ್ವರ, ರವಿ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ನಲ್ಲಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t










