✒️.ಅಮಿತ್ ಆರ್ ಆನಂದಪುರ
ಸಾಗರ : ತಾಲೂಕಿನ ಹೆಗ್ಗೋಡಿನ ಅತ್ತಿಸರ ಗ್ರಾಮದ 2ನೇ ತರಗತಿ ಎಂಟು ವರ್ಷದ ವಿದ್ಯಾರ್ಥಿ ನಿಶ್ಮೀತ್, 20ಕ್ಕೂ ಹೆಚ್ಚು ಕಡಂಜಗ ಹುಳುಗಳ ದಾಳಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆಗಸ್ಟ್ 13ರಂದು ಬೆಳಗ್ಗೆ ಮನೆಯ ಹಿತ್ತಲಿನ ತೋಟದಲ್ಲಿ ತಂದೆ ವೆಂಕಟೇಶ್ ಅವರೊಂದಿಗೆ ಇದ್ದ ವೇಳೆ ನಿಶ್ಮೀತ್ ಹಾಗೂ ಅವರ ತಂದೆಯ ಮೇಲೆ ಕಡಂಜಗ ಹುಳುಗಳು ದಾಳಿ ಮಾಡಿವೆ ಎನ್ನಲಾಗಿದೆ.
ತಕ್ಷಣ ನಿಶ್ಮೀತ್ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ತಂದೆ ವೆಂಕಟೇಶ್ ಅವರಿಗೂ ಹುಳುಗಳು ಕಚ್ಚಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಿಶ್ಮೀತ್ ಅವರು ಸಾಗರ ತಾಲೂಕಿನ ಸಹಿಪ್ರಾ ಶಾಲೆ ಶೆಡ್ತಿಕೆರೆ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರು ಹೆಗ್ಗೋಡಿನ ಅತ್ತಿಸರ ಗ್ರಾಮದ ವೆಂಕಟೇಶ್ ಹಾಗೂ ಶೋಭಾ ದಂಪತಿಯ ಪುತ್ರರಾಗಿದ್ದಾರೆ.
ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಆವರಿಸಿದೆ.ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು












