ಆನಂದಪುರ:ಮಾ.06:
“ನಾನು ರಂಗಭೂಮಿಯನ್ನು ಮಾಡುತ್ತೇನೆ ಹಾಗೂ ರಾಗಿಯನ್ನು ಸಹ ಬೆಳೆಯುತ್ತೇನೆ,” ಎಂದು ಹೆಗ್ಗೋಡು ನಿನಾಸಂ ನಿರ್ದೇಶಕರಾದ ಡಾ. ಎಂ. ಗಣೇಶ್ ತಿಳಿಸಿದರು.
ಇವರು ಇಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕೆಳದಿ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸ್ಪರ್ಧೆಗಳ ಮೂಲಕ ಒಂದಾಗಿ ಬೆರೆತು ನಡೆಯುವುದರಿಂದ ಪರಸ್ಪರ ಒಗ್ಗಟ್ಟು ಹೆಚ್ಚುತ್ತದೆ. ಇದರಿಂದ ನಾವು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಯಲು ಸಹಾಯಕವಾಗುತ್ತದೆ ಎಂದರು.
ಇಂದಿನ ಸಮಾಜದಲ್ಲಿ ದಿನ ಬೆಳಗಾದರೆ ಸಾಕು ಯುದ್ಧ, ಜಗಳ ಹಾಗೂ ಭೇದಭಾವದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂತಹ ದುಷ್ಪ್ರವೃತ್ತಿಗಳನ್ನು ತೊಡೆದುಹಾಕಲು ಕಲೆ ಮಾತ್ರ ಪರಿಣಾಮಕಾರಿ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಳದಿ ನೆಲವು ಸಂಸ್ಕೃತಿಯ ನೆಲಬೀಡು ಆಗಿದ್ದು, ಇಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಸಂಸ್ಕೃತಿ ಹಾಗೂ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾ ನಾಯಕ್ ಮಾತನಾಡಿ, ಯುವಜನೋತ್ಸವವು ವಿದ್ಯಾರ್ಥಿಗಳಿಗೆ ತಮ್ಮೊಳಗಿನ ಕಲಾವಿದನನ್ನು ಪರಿಚಯಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,ನಮ್ಮ ವಿಶ್ವ ವಿದ್ಯಾಲಯ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷ 35ರಿಂದ 40 ಲಕ್ಷ ರೂಪಾಯಿ ವೆಚ್ಚ ಮಾಡಿ ಉತ್ತಮ ವೇದಿಕೆ ಕಲ್ಪಿಸಿ ಕೊಡುತ್ತಿದೆ ಎಂದರು.

ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿ ಹೊಕ್ಕು ಅವರೊಳಗಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ ಮಾಡಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಯಶಸ್ಸು ಸಾಧಿಸುವುದು ಸುಲಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರಾದ ಡಾ ಪಿ ಕೆ ಬಸವರಾಜ್, ಡಾಕ್ಟರ್ ಬಿ ಕೆ ಕುಮಾರಸ್ವಾಮಿ, ಎಚ್ ಡಿ ದೇವಿ ಕುಮಾರ್, ಡೀನ್ ಗಳಾದ ಡಾ.ವಿ ಶ್ರೀನಿವಾಸ್, ಡಾ ಡಿ ತಿಪ್ಪೇಶ್, ಆಸ್ತಿ ಅಧಿಕಾರಿ ಅವಿನಾಶ್, ಸಹ ಸಂಶೋಧಕ ನಿರ್ದೇಶಕ ಡಾ. ಎಸ್ ಪ್ರದೀಪ್, ಡಾ. ರವಿಕುಮಾರ್, ಡಾ. ರಾಮಕೃಷ್ಣ ಹೆಗಡೆ ಇನ್ನಿತರ ಇನ್ನಿತರರು ಉಪಸ್ಥಿತರಿದ್ದರು.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t












