Home Blog ಮೇ 20 ರಿಂದ KSRTC ನೌಕರರ ಮುಷ್ಕರ, ಶಿವಮೊಗ್ಗ ಜಿಲ್ಲೆಯಲ್ಲಿಯೂ ತಟ್ಟಲಿದೆ ಬಿಸಿ..!!

ಮೇ 20 ರಿಂದ KSRTC ನೌಕರರ ಮುಷ್ಕರ, ಶಿವಮೊಗ್ಗ ಜಿಲ್ಲೆಯಲ್ಲಿಯೂ ತಟ್ಟಲಿದೆ ಬಿಸಿ..!!

18
0

✒️…ಅಮಿತ್ ಆರ್ ಆನಂದಪುರ

ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ (KSRTC)ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದನ್ನು ಖಂಡಿಸಿ, ಮೇ 20 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಮಹಾದೇವ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸರ್ಕಾರದ ಐದು ಮುಖ್ಯ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಹಗಲಿರುಳು ಶ್ರಮಿಸಿ ಯಶಸ್ವಿಗೊಳಿಸಿದ ಸಾರಿಗೆ ನೌಕರರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಏಪ್ರಿಲ್ 29 ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೇಕಡಾ 7 ರಷ್ಟು ವೇತನ ಹೆಚ್ಚಳದ ಪ್ರಸ್ತಾಪ ಮಾಡಲಾಗಿತ್ತು. ತದನಂತರ ಮೇ 12 ರಂದು ಸರ್ಕಾರ ಏಕಪಕ್ಷೀಯವಾಗಿ ಶೇ.12.5 ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಜಂಟಿ ಕ್ರಿಯಾ ಸಮಿತಿಯು ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದೆ ಎಂದು ಮಹಾದೇವ ತಿಳಿಸಿದರು.

ಸರ್ಕಾರದ ಈ ಏಕಪಕ್ಷೀಯ ಮತ್ತು ತಾರತಮ್ಯದ ಆದೇಶವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯಬೇಕಾದ ಕೈಗಾರಿಕಾ ಒಪ್ಪಂದವನ್ನು 15 ತಿಂಗಳು ಕಾಲ ವಿಳಂಬ ಮಾಡಿ ನೌಕರರಿಗೆ ಅನ್ಯಾಯ ಎಸಗಲಾಗಿದೆ ಎಂದು ದೂರಿದರು.

ಬೇಡಿಕೆಗಳು ಏನೇನು?

2024ರ ಜನವರಿ 1ರಿಂದ ಅನ್ವಯವಾಗುವಂತೆ ಶೇಕಡಾ 25 ರಷ್ಟು ವೇತನ ಹೆಚ್ಚಳದೊಂದಿಗೆ 4 ವರ್ಷಗಳ ಅವಧಿಗೆ ವೇತನ ಪರಿಷ್ಕರಣೆ ಮಾಡಬೇಕು.

2020ರ ಜನವರಿ 1 ರಿಂದ 2023ರ ಫೆಬ್ರವರಿ 28ರವರೆಗಿನ ಶೇ.15 ರಷ್ಟು ವೇತನ ಹೆಚ್ಚಳದ ಸಂಪೂರ್ಣ ಹಿಂಬಾಕಿ ಹಣವನ್ನು ನೀಡಬೇಕು ಸೇರಿದಂತೆ 7ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ ಎಂದರು.

ಮುಷ್ಕರದ ದಿನ ನೌಕರರು ರಸ್ತೆ ತಡೆ ಅಥವಾ ಪ್ರತಿಭಟನೆ ನಡೆಸುವುದಿಲ್ಲ.ಸ್ವಯಂಪ್ರೇರಿತರಾಗಿ ತಮ್ಮ ಮನೆಗಳಲ್ಲೇ ಉಳಿಯಲಿದ್ದಾರೆ. ಬಸ್‌ಗಳು ಡಿಪೋಗಳಿಂದ ಹೊರಬರುವುದಿಲ್ಲ. ಮುಷ್ಕರಕ್ಕೆ ಮುನ್ನ ಮೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶದ ಸಂದರ್ಭ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದೆಂದರು.

ಸಿಐಟಿಯು ವಿಭಾಗ ಅಧ್ಯಕ್ಷರಾಜು ಚಿನ್ನಸ್ವಾಮಿ ಸೇರಿ ಸಂಘಟನೆಯ ಪದಾಧಿಕಾರಿಗಳು, ಸಾರಿಗೆ ನೌಕರರು ಸುದ್ದಿಗೋಷ್ಠಿಯಲ್ಲಿದ್ದರು.