Home Blog ಎಂ.ಆರ್.ಎಸ್ ಬಳಿ ಕಸದ ಗಾಡಿಗೆ ಡಿಕ್ಕಿ, ಕುವೆಂಪು ವಿವಿ ವಿದ್ಯಾರ್ಥಿ ಸಾವು..!!

ಎಂ.ಆರ್.ಎಸ್ ಬಳಿ ಕಸದ ಗಾಡಿಗೆ ಡಿಕ್ಕಿ, ಕುವೆಂಪು ವಿವಿ ವಿದ್ಯಾರ್ಥಿ ಸಾವು..!!

8
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ನಗರದ ಎಂ.ಆರ್.ಎಸ್ (MRS) ಸರ್ಕಲ್ ಬಳಿ ಮಹಾನಗರ ಪಾಲಿಕೆಯ ಕಸದ ವಾಹನ ಹಾಗೂ ಬೈಕ್ ನಡುವೆ ಕಳೆದ ಸೋಮವಾರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೃತರನ್ನು ಶಿಕಾರಿಪುರ ತಾಲೂಕಿನ ಮೂಲದ ಪೀರ್ಯ ನಾಯ್ಕ್ (22) (ವಿಶ್ವನಾಥ್ ನಾಯ್ಕ್ ಹಾಗೂ ಲಲಿತಾ ಬಾಯಿ ದಂಪತಿಯ ಪುತ್ರ) ಎಂದು ಗುರುತಿಸಲಾಗಿದೆ. ಇವರು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ (MA) ಕನ್ನಡ ವ್ಯಾಸಂಗ ಮಾಡುತ್ತಿದ್ದರು.

ಅಪಘಾತ ಹಿನ್ನೆಲೆ:

ಕಾಲೇಜಿನಲ್ಲಿ ಕಳೆದ ಮಂಗಳವಾರ ‘ಸೆಂಡ್ ಅಪ್’ (ಬೀಳ್ಕೊಡುಗೆ) ಪಾರ್ಟಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದ ತಯಾರಿಗಾಗಿ ಕಳೆದ ಸೋಮವಾರ ಮುಂಜಾನೆ ಪೀರ್ಯ ನಾಯ್ಕ್ ಅವರು ತಮ್ಮ ಸ್ನೇಹಿತ ಯೋಗೇಶ್ ಅವರೊಂದಿಗೆ ಬಾಳೆಎಲೆ ತರಲು ಬೈಕ್‌ನಲ್ಲಿ ತೆರಳಿದ್ದರು. ಮುಂಜಾನೆ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿರುತ್ತದೆ ಎಂಬ ಕಾರಣಕ್ಕೆ ಬೈಕ್ ವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ.

ಇದೇ ವೇಳೆ ಶಿವಮೊಗ್ಗ ನಗರದ ಎಂ.ಆರ್.ಎಸ್ ಸರ್ಕಲ್ ಕಡೆಯಿಂದ ಇವರು ಚಲಿಸುತ್ತಿದ್ದಾಗ, ಹೊಳೆ ಬಸ್ ನಿಲ್ದಾಣದ ಕಡೆಯಿಂದ ಬಂದ ಮಹಾನಗರ ಪಾಲಿಕೆಯ ಕಸದ ವಾಹನವು ದಿಢೀರನೆ ಯು-ಟರ್ನ್ (U-Turn) ತಗೆದುಕೊಂಡಿದೆ. ಬೈಕ್ ತೀವ್ರ ವೇಗದಲ್ಲಿದ್ದ ಕಾರಣ ನಿಯಂತ್ರಣ ಸಿಗದೆ ಕಸದ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಹೆಲ್ಮೆಟ್ ಧರಿಸದಿದ್ದ ಸವಾರ ಪೀರ್ಯ ನಾಯ್ಕ್ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಆದರೆ ಬೈಕ್ ಹಿಂಬದಿ ಕುಳಿತಿದ್ದ ಯೋಗೇಶ್ ಅವರು ಲಗೇಜ್ ಬ್ಯಾಗ್ ಧರಿಸಿದ್ದರಿಂದ, ತಲೆಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದ ಸಾವು:

ಅಪಘಾತ ನಡೆದ ತಕ್ಷಣ ಗಾಯಾಳು ಪೀರ್ಯ ನಾಯ್ಕ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎನ್.ಹೆಚ್ (NH) ಆಸ್ಪತ್ರೆಗೆ ಹಾಗೂ ಅಲ್ಲಿಂದ ಮಂಗಳೂರಿನ ವೆನ್‌ಲಾಕ್ (Wenlock) ಆಸ್ಪತ್ರೆಗೆ ರವಾನಿಸಲಾಗಿತ್ತು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತಾದರೂ, ಇಂದು ಮುಂಜಾನೆ ಸುಮಾರು 5:30 ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಶಿವಮೊಗ್ಗ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.