
ಸಾಗರ : ಹಿಂದಿನಿಂದಲೂ ಕೆಪಿಟಿಸಿಎಲ್, ಮೆಸ್ಕಾಂ ಹಾಗೂ ರೈತರು ಸೇರಿದಂತೆ ಉಳಿದ ವಿದ್ಯುತ್ ಗ್ರಾಹಕರ ನಡುವೆ ಭಾವನಾತ್ಮಕವಾದ ಸಂಬಂಧ ಬೆಳೆದು ಬಂದಿದೆ ರಾತ್ರಿ ಹಗಲು ಎನ್ನದೆ ಸಿಬ್ಬಂದಿಗಳು ಗ್ರಾಹಕರಿಗೆ ಸ್ಪಂದಿಸುವುದು ಹಾಗೂ ಸಂಸ್ಥೆಯ ಏಳಿಗೆಯಲ್ಲಿ ರೈತರೂ ಸೇರಿದಂತೆ ಗ್ರಾಹಕರು ಸಹಕರಿಸುತ್ತ ಬಂದಿದ್ದಾರೆ ಆದರೆ ಏಕಾಏಕಿ ಈ ವ್ಯವಸ್ಥೆಯನ್ನು ಟಾಟಾ ಕಂಪನಿಯಂತಹ ಖಾಸಗಿ ಕಂಪನಿಗಳಿಗೆ ವಹಿಸಿ, ಮುಂದೆ ಗ್ರಾಹಕರ ಹಿತವಲ್ಲದ ವಿದ್ಯುತ್ ಖಾಸಗೀಕರಣದ ಹುನ್ನಾರ ನಡೆಸುವ ಮೂಲಕ ಎಲ್ಲರಿಗೂ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೌಕರರ ಸಂಘದ ಒಕ್ಕೂಟದ ಆಶ್ರಯದಲ್ಲಿ ವಿವಿಧ ಸಂಘಗಳ ಬೆಂಬಲದೊಂದಿಗೆ ಸಾಗರದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಒಕ್ಕೂಟದ ಪ್ರಮುಖರು, ವಿದ್ಯುತ್ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ನೀಡುವುದರಿಂದ ಗ್ರಾಮೀಣ ಗ್ರಾಹಕರಿಗೆ, ಅದರಲ್ಲಿಯೂ ಕೃಷಿ ನೀರಾವರಿಗೆ ವಿದ್ಯುತ್ ಸಂಪರ್ಕ ಪಡೆದ ರೈತರಿಗೆ ಯಾವ ರೀತಿಯ ತೊಂದರೆಯಾಗಲಿದೆ ಎನ್ನುವುದನ್ನು ವಿವರಿಸಿರುವುದಲ್ಲದೆ ಇದುವರೆಗೆ ಉತ್ತಮ ರೀತಿಯಲ್ಲಿ ಮೆಸ್ಕಾಂ ಸಂಸ್ಥೆ ಕಟ್ಟಿ ಬೆಳೆಸಿರುವ ಸಂಸ್ಥೆ ನೌಕರರೂ ಬೀದಿಗೆ ಬರುವಂತಾಗಲಿದೆ ಎಂದರು.
ಇದರ ಜತೆಗೆ ಕೇವಲ ಲಾಭದಾಯಕ ಪ್ರದೇಶಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಿರುವ ಟಾಟಾ ಖಾಸಗಿ ಕಂಪನಿ ಲಾಭದ ಲೆಕ್ಕಾಚಾರ ಮಾತ್ರ ಹಾಕುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಮುಂದೆ ತಮಗೆ ಬೇಕಾದಷ್ಟು ದರ ಹೆಚ್ಚಿಸಿ ಗ್ರಾಹಕರಿಗೆ ವಂಚನೆಯಾಗುವುದು ಖಚಿತ ಎಂದರು.

ಇದೇ ಟಾಟಾ ಕಂಪನಿ ವಿದ್ಯುತ್ ಖಾಸಗೀಕರಣ ಪಡೆದ ಒರಿಸ್ಸಾ ರಾಜ್ಯದಲ್ಲಿ ಈ ಹಿಂದೆ 2018 ರಲ್ಲಿ ವಿದ್ಯುತ್ ತೊಂದರೆಯಾದಾಗ ನಿರ್ವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ ಆಗ ಸಾಗರ, ಶಿವಮೊಗ್ಗವೂ ಸೇರಿದಂತೆ ಕರ್ನಾಟಕದಿಂದ 2000 ಕೆಪಿಟಿಸಿಎಲ್ ನೌಕರರು ಹೋಗಿ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಸುಗಮಗೊಳಿಸಿರುವ ಉದಾಹರಣೆ ಇದೆ. ಈಗಲೂ ನಮ್ಮ ನೌಕರರ ಕಾರ್ಯಕ್ಷಮತೆಯ ವಿಶಿಷ್ಟತೆಯನ್ನು ಅರ್ಥ ಮಾಡಿಕೊಳ್ಳದೆ ಖಾಸಗೀಕರಣಕ್ಕೆ ಒಲೈಸಿದರೆ ಮುಂದೆ ಇಲ್ಲಿಯೂ ತೊಂದರೆ ಅನುಭವಿಸಬೇಕು ಎಂದು ನಂದೀಶ್, ಮೆಸ್ಕಾಂ ಎಇಇ ತಿಳಿಸಿದರು.
ಈ ವೇಳೆ ಮೆಸ್ಕಾಂ ನಿವೃತ್ತ ನೌಕರ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಎಚ್.ಎಲ್ ಶ್ರೀಧರ, ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ದುರ್ಗಪ್ಪ,ಮಂಜುನಾಥ್,ಮಾಜಿ ಸದಸ್ಯರಾದ ಹಿರೇಮಠ್,ಸುರೇಂದ್ರ, ಮೆಸ್ಕಾಂಸಾಗರ ವಿಭಾಗದ ಇಇ ಚಂದ್ರಶೇಖರ್, ಎಒ ಮಂಜಪ್ಪ, ಸೊರಬ ಎಇಇ ನಂದೀಶ್, ಸವಿತಾ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ್ ಮತ್ತಿತರರು ಮಾತನಾಡಿದರು.ಸಂಘದ ಸತೀಶ್, ಮಹಾಬಲೇಶ್ವರ, ಮಂಜು, ಪ್ರಶಾಂತ್, ಸೇರಿದಂತೆ ಮೆಸ್ಕಾಂನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
















