Home Shivamogga ಮನೆ-ಮನೆ ಪೊಲೀಸ್’ ಯೋಜನೆ ಯಶಸ್ವಿ; ಜನರ ಸಹಕಾರಕ್ಕೆ PSI ಶಂಕರ ಗೌಡ ಪಾಟೀಲ್ ಕರೆ..!!

ಮನೆ-ಮನೆ ಪೊಲೀಸ್’ ಯೋಜನೆ ಯಶಸ್ವಿ; ಜನರ ಸಹಕಾರಕ್ಕೆ PSI ಶಂಕರ ಗೌಡ ಪಾಟೀಲ್ ಕರೆ..!!

24
0

✒️..ಅಮಿತ್ ಆರ್ ಆನಂದಪುರ

ಹೊಸನಗರ: ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಅಪರಾಧಮುಕ್ತ ಸಮಾಜ ನಿರ್ಮಾಣ ಸಾಧ್ಯ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಮನೆ-ಮನೆ ಪೊಲೀಸ್” ಯೋಜನೆ ಹೊಸನಗರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯ ಮೂಲಕ ಪೊಲೀಸ್–ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಹೊಸನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್ ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀಟ್ ಪೊಲೀಸ್ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ನಾಗರಿಕರಿಗೆ ಕಾನೂನು ಅರಿವು, ಸುರಕ್ಷತೆ ಹಾಗೂ ಅಗತ್ಯ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ 112 ಅಥವಾ ಮನೆಯ ಮುಂದೆ ಅಂಟಿಸಿರುವ ಬೀಟ್ ಪೊಲೀಸ್ ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದರು.

ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಕಿರುಕುಳ, ಚುಡಾಯింపు ಅಥವಾ ಶೋಷಣೆ ನಡೆದರೆ ಕೂಡಲೇ 112ಕ್ಕೆ ಕರೆ ಮಾಡಿದರೆ ತುರ್ತು ಸ್ಪಂದನಾ ವಾಹನ (ERV) ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಯುವಕರಲ್ಲಿ ಕಾನೂನು ಅರಿವು, ಸೈಬರ್ ಅಪರಾಧ ತಡೆ, ಮಾದಕ ದ್ರವ್ಯಗಳ ದುಷ್ಪರಿಣಾಮ, ಸ್ವಯಂರಕ್ಷಣೆ ಹಾಗೂ ನಾಗರಿಕರ ಹಕ್ಕುಗಳ ಕುರಿತು ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೇ ದಂಡ:

ಹೊಸನಗರ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಸುವುದು, ಟ್ರಿಪಲ್ ರೈಡಿಂಗ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸಿ, ಸಂಬಂಧಿತ ವಾಹನ ಮಾಲೀಕರ ಮನೆ ಬಾಗಿಲಿಗೇ ದಂಡದ ರಸೀದಿಯನ್ನು ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು PSI ಶಂಕರ ಗೌಡ ಪಾಟೀಲ್ ತಿಳಿಸಿದ್ದಾರೆ.

ಜಾಹೀರಾತು