✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ : ಏ.29ರಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ಕಾರ್ಯಾಲಯದ ಮೇಲೆ ನಡೆದ ದಾಳಿಯನ್ನು ಸಹ್ಯಾದ್ರಿ ಕಾಲೇಜು ಅಧ್ಯಾಪಕರ ಸಂಘ ತೀವ್ರವಾಗಿ ಖಂಡಿಸಿದೆ.ಇಂದು ಪೂರ್ವಾಹ್ನ 11ಗಂಟೆಗೆ ನಡೆದ ತುರ್ತು ಸಭೆಯಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಖಾಯಂ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದು, ಪ್ರಾಚಾರ್ಯ ಡಾ.ಎಸ್.ಸಿರಾಜ್ ಅಹ್ಮದ್ ಸದರಿ ಘಟನೆಯನ್ನು ಖಂಡಿಸಿದರು.
ಕುಲಪತಿಗಳಿಗೆ ಬೆಂಬಲವಾಗಿ ನಿಲ್ಲಲು ತೀರ್ಮಾನಿಸಲಾಯಿತು.ಸಹ್ಯಾದ್ರಿ ಕಲಾ ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಪ್ರಹ್ಲಾದಪ್ಪ ಎಂ.ಹೆಚ್. ಹಾಗೂ ಕಾರ್ಯದರ್ಶಿಗಳಾದ ಡಾ. ಮೇಟಿ ಮಲ್ಲಿಕಾರ್ಜುನ, ಇವರುಗಳು ಮಾತನಾಡಿ ಈ ರೀತಿಯ ಕೃತ್ಯವು ಮುಂದೆ ಮರುಕಳಿಸದಂತೆ ಅಧ್ಯಾಪಕರೆಲ್ಲಾ ಒಟ್ಟಾಗಿ ಈ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದರು.

ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆಗುವಂತಹ ದಾಳಿಗಳನ್ನು ಮತ್ತು ಅಹಿತಕರ ಘಟನೆಗಳನ್ನು, ಸರ್ಕಾರಿ ಕಛೇರಿಗಳ ಸಾರ್ವಜನಿಕ ಆಸ್ತಿ-ಪಾಸ್ತಿಗಳ ದ್ವಂಸ ಮಾಡುವುದನ್ನು ತಡೆಯಲು ಹಾಗೂ ದಾಳಿಯಲ್ಲಿ ಭಾಗಿಯಾದಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸಿರಾಜ್ ಅಹ್ಮದ್ ತಿಳಿಸಿದ್ದಾರೆ.















