
✒️..ಅಮಿತ್ ಆರ್ ಆನಂದಪುರ
ಸಾಗರ(ಆನಂದಪುರ), ಮೇ 9: ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಸೇವೆಯ 50 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಇಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಬೃಹತ್ “ಅಭಿಮಾನೋತ್ಸವ” ಕಾರ್ಯಕ್ರಮಕ್ಕೆ ಸಾಗರ ಹಾಗೂ ಹೊಸನಗರ ಕ್ಷೇತ್ರಗಳಿಂದ ಸುಮಾರು 4 ಸಾವಿರ ಮಂದಿ ಕಾರ್ಯಕರ್ತರು ತೆರಳಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಆನಂದಪುರದಲ್ಲಿ ಅಭಿಮಾನೋತ್ಸವಕ್ಕೆ ತೆರಳುವ ವಾಹನಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಡಿಯೂರಪ್ಪ ಅವರು ದಶಕಗಳ ಕಾಲ ನಡೆಸಿದ ಹೋರಾಟ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಜನಪರ, ಬಡವರ ಪರ ಹಾಗೂ ಮಹಿಳೆಯರ ಪರ ಯೋಜನೆಗಳು ಮತ್ತು ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ರಾಷ್ಟ್ರಮಟ್ಟದ ಸನ್ಮಾನ ಕಾರ್ಯಕ್ರಮವನ್ನು ಇಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

ಈ ಐತಿಹಾಸಿಕ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ನಾಯಕರು, ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಗರ ಮತ್ತು ಹೊಸನಗರ ಕ್ಷೇತ್ರಗಳಿಂದ ಒಟ್ಟು 4 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ತೆರಳಿದ್ದು, ಮಧ್ಯಾಹ್ನ 1 ಗಂಟೆಗೆ ಅಭಿನಂದನೋತ್ಸವ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು, ಸಾಗರ ನಗರ ಅಧ್ಯಕ್ಷೆ ಮೈತ್ರಿ ಪಾಟೀಲ್, ರಾಜನಂದಿನಿ ಕಾಗೋಡು, ಶಾಂತಪ್ಪ ಗೌಡ್ರು, ಬರ್ಮಪ್ಪ ಅಂದಾಸುರ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.













