ಮೈಸೂರು: ಈ ದೇಶ ಹಿಂದೂ ರಾಷ್ಟ್ರ ಆಗಬಾರದು. ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಪುನಃ ಬರಬಾರದು ಎಂಬುದು ನನ್ನ ಆಶಯ. ಧರ್ಮದ ಆಧಾರದ ಮೇಲೆ ದೇಶ ಕಟ್ಟಿದರೆ ಶೋಷಣೆ ಮುಂದುವರಿಯುವ ಸಾಧ್ಯತೆ ಇದೆ. ಈ ಕಾರಣಕ್ಕೆ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ನನ್ನ ವಿರೋಧವಿದೆ ಎಂದರು.
ಭಾರತ ಇಷ್ಟು ವರ್ಷಗಳಿಂದಲೂ ಸೆಕ್ಯುಲರ್ ರಾಷ್ಟ್ರವಾಗಿದೆ. ಈಗಲೂ ಭಾರತ ಧರ್ಮಾಧಾರಿತ ರಾಷ್ಟ್ರವಾಗಿಲ್ಲ. ಧರ್ಮನಿರಪೇಕ್ಷ ರಾಷ್ಟ್ರ ಎಂಬುದು ನಮ್ಮ ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು.

ದೇಶ ಹಿಂದೂ ರಾಷ್ಟ್ರವಾದರೆ ಹಿಂದುತ್ವವಾದಿಗಳು ಮನುಸ್ಮೃತಿಯಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಮತ್ತೆ ತರಲು ಪ್ರಯತ್ನಿಸಬಹುದು. ಅಂತಹ ವ್ಯವಸ್ಥೆಯಿಂದ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ಹಿಂದೂ ರಾಷ್ಟ್ರವಾದರೆ ಅದು ದೇಶಕ್ಕೆ ಮಾರಕವಾಗಲಿದೆ ಎಂದು ಹೇಳಿದ್ದರು. ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ ಎಂದರು.
ನಾನು ಸಂವಿಧಾನಾತ್ಮಕವಾಗಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಕೆಲವರಿಗೆ ನನ್ನ ಹೇಳಿಕೆ ಇಷ್ಟವಾಗದಿದ್ದರೆ ಅದು ನನ್ನ ತಪ್ಪಲ್ಲ ಎಂದು ಸ್ಪಷ್ಟಪಡಿಸಿದರು.
ಜಾಹೀರಾತು












