✒️…ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಕರ್ತವ್ಯದ ಮೇಲಿದ್ದಾಗಲೇ ತೀವ್ರ ಹೃದಯಾಘಾತಕ್ಕೊಳಗಾದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಪಡೆಯ ಯುವ ಕಾನ್ಸ್ಟೇಬಲ್ ಒಬ್ಬರು ಮೃತಪಟ್ಟ ಘಟನೆ ನಗರದಲ್ಲಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮೂಲದ ಈರಣ್ಣ ಗುಡಾದಾರ್ (26) ಮೃತಪಟ್ಟ ದುರ್ದೈವಿ. ಇವರು ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್ಪಿ 8ನೇ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಮೇ 26ರಂದು (ನಿನ್ನೆ) ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

18 ದಿನಗಳ ಹಿಂದೆಯಷ್ಟೇ ಮದುವೆ:
ಮೃತ ಈರಣ್ಣ ಅವರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ನವವಿವಾಹಿತನ ಅಕಾಲಿಕ ಮರಣ ಕುಟುಂಬದವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಕಮಾಂಡೆಂಟ್ ಸಂತಾಪ: ಯುವ ಸಿಬ್ಬಂದಿಯ ಹಠಾತ್ ನಿಧನಕ್ಕೆ ಕೆಎಸ್ಆರ್ಪಿ 8ನೇ ಪಡೆಯ ಕಮಾಂಡೆಂಟ್ ಎಸ್. ಯುವಕುಮಾರ್ ತೀವ್ರ ಕಂಬನಿ ಮಿಡಿದಿದ್ದಾರೆ. ‘ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಯುವ ಅಧಿಕಾರಿಯನ್ನು ಕಳೆದುಕೊಂಡಿರುವುದು ಇಲಾಖೆಗೆ ದೊಡ್ಡ ನಷ್ಟ. ಮೃತರ ಕುಟುಂಬಕ್ಕೆ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
















