ಶಿವಮೊಗ್ಗ : ಮಹಿಳೆಯೋರ್ವಳ ಕೊಳೆತ ಸ್ಥಿತಿಯಲ್ಲಿದ್ದ ಶವ ಜಿಲ್ಲೆಯ ರವೀಂದ್ರ ನಗರದ ಮುಖ್ಯ ರಸ್ತೆಯ ಒಂದನೇ ತಿರುವಿನ ಮನೆಯೊಂದರಲ್ಲಿ ಪತ್ತೆಯಾಗಿದೆ.
ಮೃತರನ್ನು ಜನವಾರ್ತೆ ಪತ್ರಿಕೆಯ ಸಂಪಾದಕ ದಿವಂಗತ ನಾಗರಾಜ್ ಅವರ ಪತ್ನಿ ಪ್ರಭಾವತಿ(60) ಎಂದು ಗುರುತಿಸಲಾಗಿದೆ. ಪ್ರಭಾವತಿಯವರು ಮೃತರಾಗಿ ಸುಮಾರು ಒಂದು ತಿಂಗಳಾಗಿರಬಹುದೆಂದು ಅಂದಾಜಿಸಲಾಗಿದೆ.
ದುರ್ವಾಸನೆಯ ಹಿನ್ನಲೆಯಲ್ಲಿ ನೆರೆಹೊರೆಯವರು ದೂರು ನೀಡಿದ್ದರಿಂದ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಮನೆಯ ಬೀಗ ಒಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಶವ ಗುರುತು ಸಿಗದಷ್ಟು ಕೊಳೆತು ಹೋಗಿದೆ.

ಈ ಮನೆಯಲ್ಲಿ ಸಾಕಿದ ನಾಯಿ ಕೂಡ ಇದ್ದು, ಅದು ಕೂಡ ಆಹಾರವಿಲ್ಲದೆ ಸಾವನ್ನಪ್ಪಿದ್ದು ಅದು ಕೂಡ ಕೊಳೆತು ಹೋಗಿದೆ. ತಿಂಗಳಾದರೂ ಈ ಸುದ್ದಿ ತಿಳಿಯದೇ ಇರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಭಾವತಿಯವರು ಮನೆಯಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರೆಲ್ಲರೂ ಬೇರೆ ಬೇರೆ ಮನೆಗಳಲ್ಲಿ ಇದ್ದರೂ ಕೂಡ ತಾಯಿಯ ಸಂಪರ್ಕದಲ್ಲಿ ಇರಲಿಲ್ಲವೇ ಎಂಬ ಸಂಶಯ ಮೂಡುತ್ತಿದೆ.
ಪ್ರಭಾವತಿಯವರ ಪತಿಯಾಗಿದ್ದ ದಿವಂಗತ ಜಿ.ಎಸ್.ನಾಗರಾಜ್ ಅಂದಿನ ಪ್ರಸಿದ್ದ ಪತ್ರಿಕೆಯಾಗಿದ್ದ ‘ಜನವಾರ್ತೆ’ ಸಂಪಾದಕರಾಗಿದ್ದರು. ಅವರ ನಿಧನದ ನಂತರ ಮನೆಯಲ್ಲಿ ಯಾರೂ ಇರಲಿಲ್ಲ. ಈಗ ಪ್ರಭಾವತಿಯವರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
















