✒️ಅಮಿತ್ ಆರ್ ಆನಂದಪುರ
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್ಡಿ ಸರ್ಟಿಫಿಕೇಟ್ ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದಿದ್ದ ಉಪನ್ಯಾಸಕನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ರಾಜ್ಯದಲ್ಲಿ ಉಪನ್ಯಾಸಕ ಹುದ್ದೆ ಪಡೆಯಲು ಪಿಹೆಚ್ಡಿ, ನೆಟ್ ,ಸೆಟ್ ನ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿರುವುದನ್ನು ತಡೆಯಲು ಸರ್ಕಾರ ನಿಯಮಗಳನ್ನು ರೂಪಿಸಿದ್ದು, ನಕಲಿ ಸರ್ಟಿಫಿಕೇಟ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದರಂತೆ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್ಡಿ ಸರ್ಟಿಫಿಕೇಟ್ ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದಿದ್ದ ಮಹಾದೇವ ಪ್ರಭು ಸಿಕ್ಕಿ ಬಿದ್ದಿದ್ದು, ಆತನನ್ನು ಉಪನ್ಯಾಸಕ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಕಳೆದ ಐದು ತಿಂಗಳ ಹಿಂದೆಯಷ್ಟೆ ಈ ಕಾಲೇಜಿನ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕನಾಗಿ ಮೆರಿಟ್ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ಮಹಾದೇವಪ್ರಭು ಅದಕ್ಕಾಗಿ ನಕಲಿ ಪಿಹೆಚ್ಡಿ ಸರ್ಟಿಫಿಕೇಟ್ಗಳನ್ನು ಸಲ್ಲಿಸಿದ್ದಾನೆ.
ಮಹಾದೇವ ಪ್ರಭು ಉತ್ತರಪ್ರದೇಶದ ಬಂದೇಲ್ಖಂಡ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಪಿಹೆಚ್ ಡಿ ಪಡೆದಿರುವ ಸರ್ಟಿಫಿಕೇಟ್ನ್ನು ನೇಮಕಾತಿ ಸಂದರ್ಭದಲ್ಲಿ ಕಾಲೇಜಿಗೆ ಸಲ್ಲಿಸಿದ್ದು, ಇತರೆ ಅಭ್ಯರ್ಥಿಗಳಿಗಿಂತಲೂ ಮೆರಿಟ್ ಮೇಲೆ ಆಯ್ಕೆಯಾಗಿ ಕಳೆದ ಡಿಸಂಬರ್ ತಿಂಗಳಿನಿಂದ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಮಹಾದೇವ ಪ್ರಭು ಅವರ ಪಿಹೆಚ್ಡಿ ಪ್ರಮಾಣ ಪತ್ರದ ಬಗ್ಗೆ ಅನುಮಾನಗೊಂಡು ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ ಜಿ ಚನ್ನಪ್ಪ ಅವರು ಉತ್ತರ ಪ್ರದೇಶದ ಬಂದೇಲ್ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದ್ದು, ವಿವಿ ನಡೆಸಿದ ಪರಿಶೀಲನೆಯಲ್ಲಿ ಮಹಾದೇವ ಪ್ರಭು ಅವರು ತಮ್ಮ ವಿಶ್ವವಿದ್ಯಾಲಯದಲ್ಲಿ ಯಾವುದೇ ರೀತಿಯ ಸಂಶೋಧನಾ ಪ್ರಬಂಧ ಮಂಡಿಸಿ ಯಾವುದೇ ರೀತಿಯ ಪ್ರಮಾಣ ಪತ್ರ ಪಡೆದಿಲ್ಲ. ಅವರು ಸಲ್ಲಿಸಿರುವುದು ನಕಲಿ ಪ್ರಮಾಣ ಪತ್ರ ಎಂಬುದು ದೃಢೀಕರಿಸಿದೆ.
ಈ ಹಿನ್ನಲೆಯಲ್ಲಿ ನೆನ್ನೆ ಸಂಜೆ ಮಹಾದೇವ ಪ್ರಭು ಅವರನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ವಜಾಗೊಳಿಸಿ ಪ್ರಾಂಶುಪಾಲರಾದ ಡಾ. ಬಿ ಜಿ ಚನ್ನಪ್ಪ ಆದೇಶ ಹೊರಡಿಸಿದ್ದಾರೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









